ಕಟ್ಟಿ ಕಾಲಿಗೆ ಗೆಜ್ಜೆ

ಮೂಲ : ಮೀರಾ ಬಾಯಿ 
ಕನ್ನಡಕ್ಕೆ : ಸಿ. ಪಿ. ರವಿಕುಮಾರ್ 


ಕಟ್ಟಿ ಕಾಲಿಗೆ ಗೆಜ್ಜೆ ಹಾಕಿ ಕುಣಿತದ ಹೆಜ್ಜೆ
ಮತ್ತೆ ಮಾಡುವೆ ನಾನು ನರ್ತನದ ಪೂಜೆ ||

ನನ್ನ ನಾರಾಯಣನಿಗೆ ದಾಸಿಯಾದೆನು ನಾನು
ಅನ್ಯರಾರದು ಅಲ್ಲ, ಇದು ನನ್ನದೇ  ಇಚ್ಛೆ ||

ಇಷ್ಟನೆಂಟರು ಮೀರಾ ಕುಲನಾಶಿನಿ ಎಂದರು
ಎಷ್ಟೋ ಜನ ಚುಚ್ಚಿದರು ಮೀರಾಳಿಗೆ ಹುಚ್ಚೆ? ||

ನಗುನಗುತ ಕುಡಿಯುವೆನು ನೋಡಿ ರಾಣಾಜೀ
ನೀವು ಕಳಿಸಿದ ವಿಷದ ಬಟ್ಟಲಿನ ಭಿಕ್ಷೆ ||

ನನ್ನ ಪ್ರಭು ಗಿರಿಧರನಾಗರನ ನಂಬಿರುವೆ
ತನ್ನವರಿಗೆ ನೀಡುವನು ಸಹಜ ಶ್ರೀರಕ್ಷೆ  ||



ಹದಿನಾರನೇ ಶತಮಾನದಷ್ಟು ಹಿಂದೆ ಸಮಾಜವನ್ನು ಎದುರು ಹಾಕಿಕೊಂಡು ತನ್ನ ನಂಬಿಕೆಯ ಮೇಲೆ ಬದುಕಿದವಳು  ಮೀರಾ ಬಾಯಿ. ಸಾಧುಸಂತರೊಂದಿಗೆ ಅಲೆದಾಡುತ್ತಾ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ನರ್ತಿಸುತ್ತಾ ಕಾಲ ಕಳೆದವಳನ್ನು ಸಮಾಜ ಎಷ್ಟು ನಿಂದಿಸಿರಬಹುದು! ಮೀರಾ ಬಗ್ಗೆ ಹುಟ್ಟಿಕೊಂಡಿರುವ ದಂತಕತೆಯಲ್ಲಿ ಅವಳನ್ನು ಮದುವೆಯಾಗಿದ್ದ ರಾಣಾ (ಚಿತ್ತೌಢದ ರಾಜ ರಾಣಾ ಸಾಂಗಾ ಎಂಬುವನ ಮಗ ರಾಜಾ ಭೋಜರಾಜ) ತನ್ನನ್ನು ತೊರೆದು ತನಗೆ ಅಪಮಾನ ಮಾಡಿದಳೆಂಬ ಕ್ರೋಧದಲ್ಲಿ ಮೀರಾ ಬಾಯಿಗೆ ವಿಷದ ಬಟ್ಟಲನು ಕಳಿಸುತ್ತಾನೆ; ವಿಷವನ್ನು ಕುಡಿದರೂ ಮೀರಾ ಬದುಕಿ ಉಳಿಯುತ್ತಾಳೆ.  ಇಲ್ಲಿ "ವಿಷ" ಎಂಬುವುದನ್ನು ನಾವು ಸಾಂಕೇತಿಕವಾಗಿ ಸ್ವೀಕರಿಸಬಹುದೆಂಬುದಕ್ಕೆ  ಮೀರಾಳ ಈ ಪದದಲ್ಲಿ ಸುಳಿವು ಸಿಕ್ಕುತ್ತದೆ. ಸುತ್ತಲಿನ ಸಮಾಜ ಅವಳನ್ನು "ಕುಲನಾಶಿನಿ," "ಹುಚ್ಚಿ" ಇತ್ಯಾದಿಯಾಗಿ ಹೆಸರಿಟ್ಟು  ಕರೆದದ್ದು ಯಾವ ವಿಷಕ್ಕಿಂತ ಕಡಿಮೆಯಲ್ಲ.  ಇಂಥ ವಿಷವನ್ನು ನುಂಗಿ ನಕ್ಕು ಬದುಕಿದವಳು ಮೀರಾ.  ಇನ್ನಿತರರು  ಏನೇ ಹೇಳಲಿ ನಮ್ಮ ನಂಬಿಕೆ ಬಲವಾಗಿರಬೇಕು ಎಂಬುದು ನಾವು ಕಲಿಯಬೇಕಾದ ಪಾಠ. 

Kannada translation by C.P. Ravikumar of a composition of Meera Bai - "Pag Ghungroo baandh Meera ..." (पग घूँघरू बाँध मीरा नाची रे।) (c) 2013

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)